March 16, 2026
Spread the love



ಶಿವಮೊಗ್ಗ:

ಉಳ್ಳೂರು ಶಾಖೆಯಲ್ಲಿ ನಡೆದ ಅಕ್ರಮ ಸಾಗುವಾನಿ ಮರಕಡಿತಲೆ ಪ್ರಕರಣದಲ್ಲಿ ಕರ್ತವ್ಯ ನಿರ್ಲಕ್ಷ್ಯದ ಆರೋಪದ ಮೇಲೆ ಉಪ ವಲಯ ಅರಣ್ಯಾಧಿಕಾರಿ ಸುಂದರಮೂರ್ತಿ ಎನ್.ಜಿ ಮತ್ತು ಗಸ್ತು ಅರಣ್ಯಪಾಲಕ ಪ್ರವೀಣ್ ಕುಮಾರ್ ಅವರನ್ನು ಅಮಾನತುಗೊಳಿಸಲಾಗಿದೆ. ಶಿವಮೊಗ್ಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಆದೇಶದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.

ಕಾಸ್ವಾಡಿ ಗ್ರಾಮದ ಸರ್ವೇ ನಂ.4 ಮತ್ತು 21ರ ಅರಣ್ಯ ಪ್ರದೇಶದಲ್ಲಿ 7 ಸಾಗುವಾನಿ ಮರಗಳ ಅಕ್ರಮ ಕಡಿತಲೆಯಾದ ಪ್ರಕರಣದಲ್ಲಿ, ಆರೋಪಿಗಳು ಪ್ರಕರಣ ತಡೆಯಲು ವಿಫಲರಾಗಿದ್ದು, ಸ್ವತ್ತನ್ನು ವಶಪಡಿಸಿಕೊಳ್ಳುವಲ್ಲಿ ವಿಳಂಬ ತೋರಿದ್ದಾರೆ.

ಸಾಂದರ್ಭಿಕ:

ಮುಚ್ಚಿಟ್ಟ ತುಂಡುಗಳು ಕಡಿತಲೆಯಾದ ಮರಗಳೊಂದಿಗೆ ಹೊಂದಿಕೆಯಾಗದ ಕಾರಣ, ಪ್ರಕರಣದ ಸತ್ಯಾಸತ್ಯತೆ ಬಗ್ಗೆ ತನಿಖೆ ಮುಂದುವರಿದಿದೆ.

ಆಡಿಯೋ ಸಂಭಾಷಣೆಗಳಲ್ಲಿ ಕಣಿಕೆಗೌಡ ಮತ್ತು ಪ್ರೀತಮ್ ಗೌಡ ಅವರ ಮಾತುಗಳಿಂದ ಅರಣ್ಯ ಸಿಬ್ಬಂದಿಯೇ ಅಕ್ರಮದಲ್ಲಿ ಶಾಮೀಲರಾಗಿರುವ ಸಾಧ್ಯತೆಯನ್ನು ಪುಷ್ಟಪಡಿಸಿದೆ. ಈ ಹಿನ್ನಲೆಯಲ್ಲಿ, ಸುಂದರಮೂರ್ತಿ ಮತ್ತು ಪ್ರವೀಣ್ ಕುಮಾರ್ ಕರ್ತವ್ಯ ಲೋಪ ಎಸಗಿದ್ದಾರೆ ಎಂಬುದು ಮೇಲ್ನೋಟಕ್ಕೆ ದೃಢಪಟ್ಟಿದೆ.

ಕರ್ನಾಟಕ ಅರಣ್ಯ ಸಂಹಿತೆ 1976 ಮತ್ತು ನಾಗರೀಕ ಸೇವಾ ನಿಯಮಾವಳಿ 2021ರ ಅಡಿಯಲ್ಲಿ ನಿಗದಿತ ನಿಯಮಗಳನ್ನು ಉಲ್ಲಂಘಿಸಿರುವ ಕಾರಣ, ಇಬ್ಬರ ಮೇಲಿನ ಜಂಟಿ ಇಲಾಖಾ ವಿಚಾರಣೆಯನ್ನು ಮುಂದುವರಿಸಲು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ಅಮಾನತ್ತಿನ ಅವಧಿಯಲ್ಲಿ ನೌಕರರು ಕೇಂದ್ರಸ್ಥಾನ ತ್ಯಜಿಸಬಾರದು ಹಾಗೂ ಜೀವನಾಧಾರ ಭತ್ಯೆ ಪಡೆಯಲು ಅರ್ಹರಾಗಿರುತ್ತಾರೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *