
ಗದಗ ಜಿಲ್ಲೆ :
ಗಜೇಂದ್ರ ಗಡ ತಾಲೂಕಿನ ನರೇಗಲ್ಲ ವೇದ ಗಣಿತವು ಪುರಾತನ ಗಣಿತದ ವಿಧಾನವಾಗಿದ್ದು, ಅದು ಸಂಕೀರ್ಣ ಗಣಿತ ಸಮಸ್ಯೆಗಳನ್ನು ಮನಸ್ಸಿನಲ್ಲೇ ಯೋಚಿಸಿ, ವೇಗವಾಗಿ ಪರಿಹರಿಸಲು ಸಹಾಯ ಮಾಡುತ್ತದೆ ಎಂದು ಡಾ.ಆರ್.ಕೆ. ಗಚ್ಚಿನಮಠ ಹೇಳಿದರು. ಪಟ್ಟಣದ ರೇಣಾಕಾಚಾರ್ಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಪ್ರೊಪಾತ್ ಅಕಾಡೆಮಿ ವತಿಯಿಂದ ಆಯೋಜಿಸಲಾದ ಅಬಾಕಸ್ ಮತ್ತು ವೇದಗಣಿತ ತರಬೇತಿ ಕಾರ್ಯಾಗಾರ ಉದ್ಘಾಟನೆಯಲ್ಲಿ ಅವರು ಮಾತನಾಡಿದರು.
“ವೇದಗಣಿತದ ೧೬ ಸೂತ್ರಗಳ ಮೂಲಕ ಗಣಿತದ ತಂತ್ರಗಳನ್ನು ಸರಳವಾಗಿ ಅರ್ಥೈಸಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವೇದಗಣಿತ ಲಾಭದಾಯಕವಾದರೂ, ಅದು ಮಾತ್ರ ಪ್ರಯೋಜನಕಾರಿ ಎಂಬ ಅಭಿಪ್ರಾಯವು ಉತ್ಪ್ರೇಕ್ಷಿತ. ಮಕ್ಕಳಿಗೆ ಗಣಿತವನ್ನು ರಂಜನೀಯಗೊಳಿಸಲು ಮಾತ್ರ ಇದು ಸಹಾಯ ಮಾಡಬಹುದು” ಎಂದು ಡಾ. ಗಚ್ಚಿನಮಠ ವಿವರಿಸಿದರು. ಅವರು, “ಮಕ್ಕಳು ಸಂಖ್ಯೆಗಳೊಂದಿಗೆ ಸ್ನೇಹ ಬೆಳೆಸಬೇಕು. ಶೂನ್ಯದಿಂದಲೇ ಗಣಿತದ ಪರಿಚಯ ಆರಂಭಿಸಬೇಕು. ವೇದಗಣಿತ ಕಲಿಕೆ ಮಕ್ಕಳ ಮಾನಸಿಕ ಕೌಶಲವೃದ್ಧಿಗೆ ಸಹಕಾರಿಯಾಗಬಹುದು” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ರಶ್ಮಿ ಕರಮುಡಿ, ಬಸವರಾಜ ಬಿ. ಕುರಿ, ನಿರ್ಮಲಾ ಹಿರೇಮಠ, ಶಿವಮೊಗ್ಗ ಪ್ರೊಪಾತ್ ಅಕಾಡೆಮಿಯ ವೀರೇಶ ತಿಮ್ಮಾಪೂರ, ಜ್ಯೋತಿ ತಿಮ್ಮಾಪೂರ, ಜ್ಯೋತಿ ಪ್ರಕಾಶ ಪಾಯಪ್ಪಗೌಡ್ರ, ಅಕ್ಕಮ್ಮ ಬೇಟಗೇರಿ, ಸುಮಾ ಕಲ್ಲೂರ, ರೇಖಾ ಪಾಯಪ್ಪಗೌಡ್ರ, ಶ್ವೇತಾ ಕೆ. ಕೂಟಗಿ ಉಪಸ್ಥಿತರಿದ್ದರು.
(ವರದಿ: ಗದಗ ಜಿಲ್ಲಾ ವರದಿಗಾರರು ಎಸ್. ವಿ. ಸಂಕನಗೌಡ್ರ)