March 3, 2026
Spread the love



ಉಡುಪಿ: ಉಡುಪಿ ಜಿಲ್ಲೆಯ ರಾಜಕೀಯ ವಾತಾವರಣದಲ್ಲಿ ಉದ್ವಿಗ್ನತೆ ನಿರ್ಮಾಣವಾಗಿದ್ದು, ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ನಾಗೇಂದ್ರ ಪುತ್ರನ್ ಅವರು ಜೀವ ಬೆದರಿಕೆ ಎದುರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ನಾಗೇಂದ್ರ ಪುತ್ರನ್ ಅವರು ನೀಡಿದ ಮಾಹಿತಿಯಂತೆ, ಕೆಲವು ದುಷ್ಕರ್ಮಿಗಳು ಮಲ್ಪೆ ಪ್ರತಿಭಟನಾ ಸಭೆಯಲ್ಲಿ ಅವರ ಮೇಲೆ ದಾಳಿ ಮಾಡಲು ಯತ್ನಿಸಿದ್ದು, ಪೊಲೀಸರೇ ಬೇರೆಯವರ ಪ್ರಚೋದನೆಯಿಂದ ಕೆಲಸ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.

ಪ್ರಚೋದನಕಾರಿ ಭಾಷಣದ ಆರೋಪ

ಈ ಎಲ್ಲಾ ಘಟನೆಗಳಿಗೆ ಮಾಜಿ ಸಚಿವ ಪ್ರಮೋದ್ ಮದ್ವರಾಜ್ ಅವರ ಪ್ರಚೋದನಕಾರಿ ಭಾಷಣವೇ ಕಾರಣ ಎಂದು ನಾಗೇಂದ್ರ ಪುತ್ರನ್ ಹೇಳಿದ್ದಾರೆ. “ಪೋಲೀಸ್ ಅಧಿಕಾರಿಗಳಿಗೆ ಬೆದರಿಕೆ, ಮಾಧ್ಯಮ ಪ್ರತಿನಿಧಿಗಳಿಗೆ ಬೆದರಿಕೆ, ಎಸ್.ಸಿ ಸಂಘಟನೆಗಳಿಗೆ ನಿಂದನೆ, ನಮ್ಮ ನಾಯಕರಾದ ರಮೇಶ್ ಕಾಂಚನ್ ಅವರನ್ನು ಹೊಡೆಯಲು ಮುಂದಾದ ದುಷ್ಕರ್ಮಿಗಳು ನನಗೂ ಜೀವ ಬೆದರಿಕೆ ಹಾಕಿದ್ದಾರೆ. ನನ್ನ ವಿರುದ್ಧ ಪೋಸ್ಟರ್ ಹೊಂಚಿ, ನನ್ನ ಪ್ರಾಣಕ್ಕೆ ಅಪಾಯ ಉಂಟುಮಾಡಲಾಗಿದೆ” ಎಂದು ಅವರು ದೂರಿದ್ದಾರೆ.

ಪೊಲೀಸ್ ರಕ್ಷಣೆ ಮತ್ತು ಕಠಿಣ ಕ್ರಮಕ್ಕೆ ಆಗ್ರಹ

ಈ ಬೆದರಿಕೆಗಳನ್ನು ಗಂಭೀರವಾಗಿ ಪರಿಗಣಿಸುವಂತೆ ಪೊಲೀಸರು ಕೇಳಿ, ತನ್ನ ಭದ್ರತೆಗಾಗಿ ತಕ್ಷಣವೇ ಸೂಕ್ತ ರಕ್ಷಣೆ ಒದಗಿಸಬೇಕೆಂದು ನಾಗೇಂದ್ರ ಪುತ್ರನ್ ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ. ಅಲ್ಲದೆ, ಮಲ್ಪೆ ಪ್ರತಿಭಟನೆ ವೇಳೆ ತಮ್ಮನ್ನು ಹೊಡೆಯಲು ಯತ್ನಿಸಿದವರ ವಿರುದ್ಧ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಮೊಗವೀರ ಮಹಿಳೆಯರ ನ್ಯಾಯಕ್ಕಾಗಿ ಹೋರಾಟ

ಮಲ್ಪೆ ಪ್ರಕರಣದಲ್ಲಿ ಮೊಗವೀರ ಸಮುದಾಯದ ಮಹಿಳೆಯರು ಇಕ್ಕಟ್ಟಿಗೆ ಸಿಕ್ಕಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಈ ಪ್ರಕರಣವನ್ನು ಸಡಿಲಗೊಳಿಸಲು ಪೊಲೀಸರು ಸಂಪೂರ್ಣ ಸಹಾಯ ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ. ಈ ಸಂಬಂಧ ಬಿಜೆಪಿಯವರು ಈಗಾಗಲೇ ರಾಜಕೀಯ ಬಣ್ಣ ಹಚ್ಚಿದ್ದಾರೆ ಎಂಬ ಆರೋಪವೂ ಅವರು ಮಾಡಿದ್ದಾರೆ.

ವ್ಯಾಪಕ ಹೋರಾಟ ಮತ್ತು ರಾಜಕೀಯ ದಾಳಿಗಳು

ನಾಗೇಂದ್ರ ಪುತ್ರನ್ ಪ್ರಕಾರ, ಸಾವಿರಾರು ಜನರು ಒಂದೇ ಬ್ಯಾಂಕಿನಿಂದ ಅನ್ಯಾಯಕ್ಕೆ ಒಳಗಾಗಿದ್ದಾರೆ. ಈ ಪ್ರಕರಣದಲ್ಲಿ ಸಂತ್ರಸ್ತರ ಪರವಾಗಿ ಅವರು ಕಳೆದ 8 ತಿಂಗಳಿಂದ ಹೋರಾಟ ನಡೆಸುತ್ತಿದ್ದಾರೆ. ಇದನ್ನು ತಡೆಗಟ್ಟಲು, ಉಡುಪಿ ಶಾಸಕರು ಪಿಡಿ ರೌಡಿಗಳ ಮೂಲಕ ಅವರ ಹತ್ಯೆಗೆ ಹುನ್ನಾರ ನಡೆಸುತ್ತಿದ್ದಾರೆ ಎಂಬ ಗಂಭೀರ ಆರೋಪವನ್ನು  ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.

ಈ ಎಲ್ಲಾ ಸಂಗತಿಗಳ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ತಕ್ಷಣವೇ ಸೂಕ್ತ ಕ್ರಮ ಕೈಗೊಂಡು ನಾಗೇಂದ್ರ ಪುತ್ರನ್ ಅವರ ಜೀವ ಭದ್ರತೆಯನ್ನು ಖಚಿತಪಡಿಸಬೇಕು ಎಂಬುದು ಅವರ ಆಗ್ರಹವಾಗಿದೆ.

ವರದಿ:ಆರತಿ ಗಿಳಿಯಾರು ಉಡುಪಿ ಜಿಲ್ಲೆ.

Leave a Reply

Your email address will not be published. Required fields are marked *