
ಪತ್ರಕರ್ತರಿಗೆ ಸಂತಸದ ಸುದ್ದಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದು ಮಹತ್ವದ ಘೋಷಣೆ ಮಾಡಿದ್ದಾರೆ. ರಾಜ್ಯದ ಎಲ್ಲಾ ಮಾನ್ಯ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡುವ ಯೋಜನೆ ಹಾಗೂ ‘ಆರೋಗ್ಯ ಸಂಜೀವಿನಿ’ ಹೆಸರಿನ ಆರೋಗ್ಯ ಯೋಜನೆಗೆ ಅವರು ಇಂದು ಅಧಿಕೃತ ಚಾಲನೆ ನೀಡಿದರು.
ಬೆಂಗಳೂರಿನಲ್ಲಿ ಜುಲೈ 1ರಂದು ನಡೆದ ಪತ್ರಿಕಾ ದಿನಾಚರಣೆ-2025 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪತ್ರಕರ್ತರ ಸೇವೆಯನ್ನು ಗೌರವಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು. ಮಾಧ್ಯಮಗಳ ಪಾತ್ರ ಇಂದು ಬದಲಾಗುತ್ತಿರುವ ಸಂದರ್ಭದಲ್ಲೂ ನಿಜವಾದ ಸುದ್ದಿಗಾಗಿ ಹೋರಾಡುವ ಧೈರ್ಯ ಮತ್ತು ಇಮಾನದಾರಿಕೆಯನ್ನು ಹೊಂದಿರುವ ಪತ್ರಕರ್ತರಿಗೆ ಈ ರೀತಿ ಬೆಂಬಲ ನೀಡುವುದು ಸರ್ಕಾರದ ಕರ್ತವ್ಯವಾಗಿದೆ ಎಂದರು.
“ನಾನು ಮಾಧ್ಯಮ ಸ್ವಾತಂತ್ರ್ಯದ ಪರವಾಗಿದ್ದೇನೆ. ಮಾಧ್ಯಮಗಳು ಧೈರ್ಯವಾಗಿ, ನಿರ್ಭೀತಿಯಿಂದ ಹಾಗೂ ನಿಸ್ಪಕ್ಷಪಾತವಾಗಿ ಸುದ್ದಿಯನ್ನು ಹೊರತಂದರೆ ಸಮಾಜ ಸುಧಾರಣೆಗೆ ಅದು ಸಾಕಷ್ಟು ಸಹಾಯ ಮಾಡುತ್ತದೆ. ಕೆಲವು ಚಾನೆಲ್ಗಳು ನನ್ನ ವಿರುದ್ಧ ಸುಳ್ಳು ಸುದ್ದಿ ಪ್ರಸಾರ ಮಾಡಿದರೂ, ನಾನು ಒಂದೇ ಬಾರಿ ಫೋನ್ ಮಾಡಿ ಕೇಳಿದ್ದಿಲ್ಲ. ಇದು ನನ್ನ ಧೈರ್ಯ ಮತ್ತು ಸಹನೆಗೆ ಸಾಕ್ಷಿಯಾಗಿದೆ,” ಎಂದು ಸಿಎಂ ಹೇಳಿದರು.
ಪತ್ರಕರ್ತರ ದಿನಚರಿ ತುಂಬಾ ಬದಲಾಗಿರುತ್ತದೆ. ನಗರ, ಗ್ರಾಮಾಂತರ ಪ್ರದೇಶಗಳಲ್ಲಿ ಹಗಲು-ರಾತ್ರಿ ಹೋರಾಟ ನಡೆಸುವ ಪತ್ರಕರ್ತರು ಸರಕಾರಿ ಬಸ್ಗಳಲ್ಲಿ ಉಚಿತವಾಗಿ ಸಂಚರಿಸಲು ಅವಕಾಶ ದೊರೆಯುವುದು ಅವರ ಮೇಲಿನ ಒತ್ತಡವನ್ನು ಕಡಿಮೆ ಮಾಡಲಿದೆ. ಈ ಮೂಲಕ ಸುದ್ದಿಗಾರರ ದೈನಂದಿನ ಕಾರ್ಯಕ್ಷಮತೆ ಹೆಚ್ಚಾಗಲಿದೆ ಎಂಬ ನಂಬಿಕೆ ವ್ಯಕ್ತಪಡಿಸಲಾಗಿದೆ.
ಇದಕ್ಕೂ ಮಿಕ್ಕಂತೆ, ಆರೋಗ್ಯ ಸಂಜೀವಿನಿ ಯೋಜನೆಯಡಿ ಪತ್ರಕರ್ತರಿಗೆ ಉಚಿತ ಚಿಕಿತ್ಸಾ ಸೇವೆ, ವೈದ್ಯಕೀಯ ಸಹಾಯ ಮತ್ತು ವಿಮಾ ಅನುಕೂಲಗಳು ದೊರೆಯಲಿವೆ. ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಪತ್ರಕರ್ತರನ್ನು ಮುಖ್ಯಮಂತ್ರಿ ಕರೆ ನೀಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ಮಾಹಿತಿ ಇಲಾಖೆ ಅಧಿಕಾರಿಗಳು, ಪತ್ರಿಕಾ ಪ್ರತಿನಿಧಿಗಳು ಹಾಗೂ ಪತ್ರಕರ್ತರ ಸಂಘದ ಸದಸ್ಯರು ಪಾಲ್ಗೊಂಡಿದ್ದರು.