March 3, 2026
Spread the love



ಹಾಸನ ಜಿಲ್ಲೆ:

ಆಲೂರು ತಾಲೂಕು ಕೆ.ಹೊಸಕೋಟೆ ಹೋಬಳಿಯ ಶಿರಗಾವರ ಗ್ರಾಮದಲ್ಲಿ ಭಾನುವಾರ ರಾತ್ರಿ ಸಂಭವಿಸಿದ ತೀವ್ರ ಗಾಳಿ ಮಳೆಗೆ ಬೃಹದಾಕಾರದ ಮರವೊಂದು ಜರಿದು, ಮನೆ, ಕಾರು, ಕೋಳಿ ಷೆಡ್ ಮತ್ತು ಜಕ್ಕಂ ಸಂಪೂರ್ಣ ನಾಶವಾಗಿರುವ ದಾರುಣ ಘಟನೆ ನಡೆದಿದೆ. ಘಟನೆಯು ಶಿರಗಾವರ ಗ್ರಾಮದ ರಾಯರುಕೊಪ್ಪಲು – ಹರಿಹಳ್ಳಿ ಟೆಂಪಲ್ ರಸ್ತೆ ನಡುವಿನ ಭಾಗದಲ್ಲಿ ಇದೆ.



ಲಕ್ಷ್ಮಣ್ ಗೌಡ ಎಂಬುವವರಿಗೆ ಸೇರಿದ ಈ ಮನೆ ಮೇಲೆ ಬೀಳಿದ ಮರದ ತೀವ್ರತೆಯಿಂದ ಮನೆಗೆ ಬೃಹತ್ ಹಾನಿ ಸಂಭವಿಸಿದ್ದು, ಕಾರು ಸಂಪೂರ್ಣ ಜಜ್ಜಿಕೊಂಡಿದ್ದು, ಮನೆಯ ಪಕ್ಕದಲ್ಲಿದ್ದ ಕೋಳಿ ಷೆಡ್ ಕೂಡಾ ಭಸ್ಮವಾಗಿದೆ. ಜಕ್ಕಂ ಪೂರ್ತಿಯಾಗಿ ಹಾನಿಯಾಗಿದೆ. ಆದರೆ ಆಶ್ಚರ್ಯದ ಸಂಗತಿಯೆಂದರೆ, ಈ ಮನೆಯಲ್ಲಿದ್ದ ನೂರು ವರ್ಷದ ವೃದ್ಧ ಅಜ್ಜಿ ಕೇವಲ ಅಲ್ಪಾಸ್ಥೇನ ಪಾರು ಆಗಿದ್ದಾರೆ. ಯಾವುದೇ ಪ್ರಾಣಹಾನಿಯಾಗದಿರುವುದು ದೇವರ ಕೃಪೆ ಎನಿಸಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.



ಈ ದುರಂತದ ಹಿಂದೆ ಅರಣ್ಯ ಇಲಾಖೆಯ ನಿರ್ಲಕ್ಷತೆಯೇ ಕಾರಣ ಎಂದು ಗ್ರಾಮದ ಜನತೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಹುಷಃ ವರ್ಷಗಳ ಕಾಲ ರಸ್ತೆಯ ಬದಿಯಲ್ಲಿ ತಲೆದೋರುತ್ತಿದ್ದ ಬೃಹತ್ ಮರದ ಬಗ್ಗೆ ಅರ್ಜಿಗಳು ನೀಡಲಾಗಿದ್ದರೂ ಕ್ರಮ ಕೈಗೊಳ್ಳಲಾಗಿರಲಿಲ್ಲ. ಮರವು ಸಂಪೂರ್ಣ ಒಣಗಿದ್ದು, ಅಲುಗಾಡುತ್ತಿದ್ದರೂ ನಿರ್ಲಕ್ಷಿಸಲಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಘಟನೆಯಿಂದಾಗಿ ಪ್ರಮುಖವಾಗಿ ಸಂಪರ್ಕ ಕಲ್ಪಿಸುವ ರಾಯರುಕೊಪ್ಪಲು – ಹರಿಹಳ್ಳಿ ದೇವಸ್ಥಾನ ರಸ್ತೆ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ಮರ ರಸ್ತೆಯ ಮಧ್ಯೆ ಬಿದ್ದಿದ್ದು, ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ. ಸಾರ್ವಜನಿಕರು ಮತ್ತು ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಸುದ್ದಿ ದೊರಕಿದ ತಕ್ಷಣ ಸ್ಥಳಕ್ಕೆ ಸ್ಥಳೀಯ ಆಡಳಿತ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕದಳ, ಅರಣ್ಯ ಇಲಾಖೆ ಹಾಗೂ ವಿದ್ಯುತ್ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಲಾಗಿದೆ. ಮರದ ಅವಶೇಷಗಳನ್ನು ತೆರವುಗೊಳಿಸಲು ಯತ್ನ ನಡೆಯುತ್ತಿದೆ.

ಇದೊಂದು ಎಚ್ಚರಿಕೆ ಘಟನೆಯಾಗಿದ್ದು, ಈ ಹಿನ್ನಲೆಯಲ್ಲಿ ಇನ್ನು ಮುಂದೆ ರಸ್ತೆ ಬದಿಯ ಅಪಾಯಕರ ಮರಗಳನ್ನು ಅರಣ್ಯ ಇಲಾಖೆ ತ್ವರಿತವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *