March 3, 2026
Spread the love

ತಮಿಳುನಾಡು: ನಮ್ಮದು ಶಾಂತಿ ಸಹಬಾಳ್ವೆಯ ಭಾರತ. ಆದರೆ ಇತ್ತೀಚಿನ ವರ್ಷಗಳಲ್ಲಿ ಸೌಹಾರ್ದತೆ ಎನ್ನುವುದು ಕಡಿಮೆಯಾಗುತ್ತಿದೆ. ಚುನಾವಣೆ ಮತ್ತು ರಾಜಕೀಯ ಮಧ್ಯೆ ಧರ್ಮಗಳ ನಡುವಿನ ಸಾಮರಸ್ಯ ಕಡಿಮೆಯಾಗುತ್ತಿದೆ. ಹಿಂದೂವಾಗಲಿ ಅಥವಾ ಮುಸ್ಲಿಂ ಆಗಲಿ, ನಾವೆಲ್ಲ ಸಹೋದರರಂತೆ ಬಾಳಿದರೆ ಸಾಮರಸ್ಯ, ಶಾಂತಿಯಿಂದ ಬದುಕಬಹುದು. ಇದಕ್ಕೆ ತಮಿಳುನಾಡಿನ ತಿರುಪ್ಪೂರ್ ಜಿಲ್ಲೆಯ ಪಡಿಯೂರು ಬಳಿಯ ಒಟ್ಟಪಾಳ್ಯಂ ಪ್ರದೇಶದಲ್ಲಿ ನಡೆದ ಹಿಂದೂ – ಮುಸ್ಲಿಂ ಬಾಂಧವ್ಯದ ಘಟನೆಯು ಉದಾಹರಣೆ.



ಒಟ್ಟಪಾಳ್ಯಂನಲ್ಲಿ ಸುಮಾರು 300 ಹಿಂದೂ ಮತ್ತು ಮುಸ್ಲಿಂ ಕುಟುಂಬಗಳು ಜೊತೆಯಾಗಿ ವಾಸಿಸುತ್ತಿವೆ. ರೋಸ್ ಗಾರ್ಡನ್ ಪ್ರದೇಶದಲ್ಲಿ ಹೆಚ್ಚು ಮುಸ್ಲಿಮರೇ ವಾಸವಾಗಿದ್ದರೂ, ಹಿಂದೂ ಕುಟುಂಬಗಳು ದೇವಾಲಯವಿಲ್ಲದೆ ತೊಂದರೆ ಅನುಭವಿಸುತ್ತಿದ್ದವು. ಹೀಗಾಗಿ, ಅವರು ಗಣೇಶ ದೇವಾಲಯ ನಿರ್ಮಿಸಲು ಸೂಕ್ತ ಜಾಗವನ್ನು ಹುಡುಕಲು ಪ್ರಾರಂಭಿಸಿದರು. 20 ವರ್ಷಗಳ ಹಿಂದೆ ಖರೀದಿಸಿದ ಮುಸ್ಲಿಂ ಕುಟುಂಬದ ಲೇಔಟ್ ಜಾಗದಲ್ಲಿ ಗಣೇಶ ದೇವಾಲಯ ನಿರ್ಮಿಸಲು 3 ಸೆಂಟ್ಸ್ ಭೂಮಿಯನ್ನು ದಾನವಾಗಿ ನೀಡಿದರು.

ಮೇ 26 ರಂದು ದೇವಾಲಯದ ಶಂಕು ಸ್ಥಾಪನೆ ನೆರವೇರಿತು. ಮುಸ್ಲಿಮರು ಹಣ್ಣು ಹಂಪಲು ಮತ್ತು ಅಗತ್ಯ ಸಾಮಾಗ್ರಿಗಳನ್ನು ನೀಡಿದರು. ಹಿಂದೂಗಳು ಮುಸ್ಲಿಮರನ್ನು ಹೂ ಹಾರ ಹಾಕಿ ಸ್ವಾಗತಿಸಿದರು. ಶಂಕು ಸ್ಥಾಪನೆಯ ಅನ್ನ ಪ್ರಸಾದವನ್ನು ಮುಸ್ಲಿಮರೂ ಸೇರಿ ಸೇವಿಸಿದರು.

ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಸಹೋದರತ್ವದ ಮಾದರಿಯಾಗಿದೆ.

Leave a Reply

Your email address will not be published. Required fields are marked *