March 3, 2026
Spread the love



ಬನಹಟ್ಟಿ: ಬೇಸಿಗೆಯ ಬಿರು ಬಿಸಿಲಿನ ತಾಪಕ್ಕೆ ಕೆರೆ-ಬಾವಿಗಳು ಬತ್ತಿ ಹೋಗಿ, ಪಶು-ಪಕ್ಷಿಗಳಿಗೆ ನೀರಿನ ಅಭಾವ ಉಂಟಾಗಿತ್ತು. ಜೀವಜಲವಿಲ್ಲದೆ ಪಕ್ಷಿಗಳಿಗೆ ತೊಂದರೆ ಆಗಬಾರದೆಂದು ಮಾತೃಶ್ರೀ ಹೇಮಾವತಿ ಅಮ್ಮನವರ ಆಶಯದಂತೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜಮಖಂಡಿ ತಾಲ್ಲೂಕು, ಬನಹಟ್ಟಿ ವಲಯದ ಸೋಮವಾರಪೇಟೆ ಕಾರ್ಯಕ್ಷೇತ್ರದ ಸದಸ್ಯರು ಮಾನವೀಯ ಕಾರ್ಯಕ್ಕೆ ಮುಂದಾದರು.

ಸಂಘದ ಸದಸ್ಯರು, ಒಕ್ಕೂಟದ ಅಧ್ಯಕ್ಷರಾದ ಸವಿತಾ ಭಗವತಿ, ವಲಯ ಮೇಲ್ವಿಚಾರಕರಾದ ಶಿವಾನಂದ, ಕೃಷಿ ಮೇಲ್ವಿಚಾರಕರಾದ ಚನ್ನಯ್ಯ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶ್ರೀದೇವಿ, ಸೇವಾಪ್ರತಿನಿಧಿ ಗೀತಾ ಹಾಗೂ ಇತರರು ಈ ಕಾರ್ಯದಲ್ಲಿ ಭಾಗವಹಿಸಿ, ಬೇಸಿಗೆಯಲ್ಲಿ ಹಸಿವಿನಿಂದ ನರಳುತ್ತಿರುವ ಪಕ್ಷಿಗಳಿಗೆ ಕಾಳು ಹಾಗೂ ನೀರಿನ ವ್ಯವಸ್ಥೆ ಮಾಡಿದರು.

ಈ ಕಾರ್ಯಕ್ಕೆ ಸ್ಥಳೀಯರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇಂತಹ ಸಾಮಾಜಿಕ ಹೊಣೆಗಾರಿಕೆಯ ಕಾರ್ಯಗಳು ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸಬೇಕು ಎಂಬ ಆಶಯ ವ್ಯಕ್ತಪಡಿಸಿದರು. ತೀವ್ರ ಬೇಸಿಗೆಯಲ್ಲಿ ಪ್ರಾಣಿಗಳಿಗೂ ನೆರವಾಗಬೇಕೆಂಬ ಉದ್ದೇಶದಿಂದ ಈ ಕಾರ್ಯಚಟುವಟಿಕೆ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯದಿಂದ ಅನೇಕ ಪಕ್ಷಿಗಳು ಜೀವ ಉಳಿಸಿಕೊಳ್ಳಲು ಸಾಧ್ಯವಾಯಿತು.

ಸಮಾಜದ ಪ್ರತಿಯೊಬ್ಬರು ಪ್ರಾಣಿ-ಪಕ್ಷಿಗಳಿಗೆ ಸಹಾಯ ಮಾಡುವ ಮನೋಭಾವ ಬೆಳೆಸಿಕೊಂಡರೆ, ಪರಿಸರ ಸಂರಕ್ಷಣೆಗೂ ಒಳ್ಳೆಯ ಉದಾಹರಣೆಯಾಗಬಹುದು ಎಂಬ ಸಂದೇಶ ನೀಡಿದ ಈ ತಂಡಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *