
ಹಾಸನ: ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸ್ಥಳೀಯ ಶಾಸಕ ಹೆಚ್. ಪಿ.ಸ್ವರೂಪ್ ಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ನಡೆಯಿತು.
ಸಭೆಯಲ್ಲಿ ಭಾಗಿಯಾಗಿದ್ದ ಎಲ್ಲ ಅಧಿಕಾರಿಗಳಿಂದ ತಮ್ಮ ತಮ್ಮ ಇಲಾಖೆ ಆಗಿರುವ ಪ್ರಗತಿ ಬಗ್ಗೆ ಶಾಸಕರು ಮಾಹಿತಿ ಪಡೆದುಕೊಂಡರು.
ಆದರೆ ಕೆಲವು ಇಲಾಖೆಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಪ್ರಗತಿ ಸಾಧಿಸದೇ ಇರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ನಿಗದಿತ ಕಾಲಮಿತಿ ಯೊಳಗೆ ಗುರಿ ಸಾಧಿಸಬೇಕು ಎಂದು ಸೂಚಿಸಿದರು. ಆಯಾ ಇಲಾಖೆಗಳ ವ್ಯಾಪ್ತಿಯ ಯೋಜನೆಗಳು ಬಗ್ಗೆ ರೈತರು, ಜನರಿಗೆ ಮನವರಿಕೆ ಮಾಡಬೇಕು. ಈ ಸಂಬಂಧ ಹೆಚ್ಚು ಹೆಚ್ಚು ಪ್ರಚಾರ ಮಾಡಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ತಾಲೂಕು ಅರಣ್ಯ ಇಲಾಖೆಯಿಂದ ಈ ಬಾರಿ ಪರಿಸರ ದಿನಾಚರಣೆ ಆಚರಣೆ ಮಾಡದೇ ಇರುವುದಕ್ಕೆ ಶಾಸಕರು ಗರಂ ಆದರು. ಜೂ.4 ರಂದು ಬೆಂಗಳೂರಿನಲ್ಲಿ ಕಾಲ್ತುಳಿತ ದುರಂತ ಸಂಭವಿಸಿದ್ದರಿಂದ ಜೂ.5 ಕಾರ್ಯಕ್ರಮವನ್ನು ಸರ್ಕಾರ ರದ್ದು ಮಾಡಿತ್ತು. ಆದರೆ ನಾವು ಸ್ಕ್ಔಟ್ಸ್ ಅಂಡ್ ಗೈಡ್ಸ್ ಸಹಕಾರದೊಂದಿಗೆ ಸರ್ಕಾರಿ ಮಹಿಳಾ ಪದವಿ ಕಾಲೇಜಿ ನಲ್ಲಿ ಕಾರ್ಯಕ್ರಮ ಮಾಡಿದೆವು ಎಂದು ಅಧಿಕಾರಿ ಹೇಳಿದರು.
ಇದರಿಂದ ಸಿಟ್ಟಾದ ಶಾಸಕರು, ಅಂದಿನ ಕಾರ್ಯಕ್ರಮಕ್ಕೆ ತಮ್ಮನ್ನೇಕೆ ಆಹ್ವಾನಿಸಲಿಲ್ಲ ಎಂದು ಕೇಳಿದರು. ಇದೇ ವೇಳೆ ಇಲಾಖೆ ವ್ಯಾಪ್ತಿಯಲ್ಲಿ ಕಳೆದ ಎರಡು ವರ್ಷಗಳಿಂದ ಏನೆಲ್ಲಾ ಕೆಲಸ ಮಾಡಿದ್ದೀರಿ, ಎಷ್ಟು ಸಸಿ ನೆಟ್ಟಿದ್ದೀರಿ ಎಂಬ ಬಗ್ಗೆ ಮಾಹಿತಿ ಕೊಡಿ ಎಂದು ತಾಕೀತು ಮಾಡಿದರು. ಇಲಾಖೆಯಲ್ಲಿ ಲೋಪ ನಡೆದಿರುವ ಶಂಕೆ ಇದೆ. ಕೆಐಎಡಿಬಿ ವ್ಯಾಪ್ತಿಯ 3 ಎಕರೆಯಲ್ಲಿ ಬಫರ್ ಝೂನ್, ಯರೇಹಳ್ಳಿ-ಮಣಚನಹಳ್ಳಿ ಭಾಗದಲ್ಲಿ ಸಸಿ ನೆಡಲಾಗಿದೆ. 18 ಕಿಮೀ ಸಸಿ ನೆಡಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು.
ಆದರೆ ಚಿಕ್ಕಕಡಲೂರು-ದುದ್ದ ನಡುವೆ ನೆಟ್ಟಿರುವ ಸಸಿ ನಿರ್ವಹಣೆ ಮಾಡಲು ಲಕ್ಷಾಂತರ ರೂ. ಖರ್ಚು ಮಾಡಿರುವುದನ್ನು ಅಸಮಾಧಾನ ಹೊರ ಹಾಕಿದ ಶಾಸಕರು, ಈ ಬಗ್ಗೆ ಪರಿಶೀಲಿಸಿ ವರದಿ ಕೊಡಿ ಎಂದು ತಾಪಂ ಇಒ ಅವರಿಗೆ ಸೂಚನೆ ನೀಡಿದರು.
ಅಲ್ಲದೆ ಅರಸೀಕೆರೆ ರಸ್ತೆ, ಕೈಗಾರಿಕಾ ಪ್ರದೇಶ, ವಿಶ್ವ ವಿದ್ಯಾನಿಲಯ ಮೊದಲಾದ ಕಡೆ ಹಿಂದೆ ಆಗಿರುವ ಪ್ರಗತಿಯನ್ನು ಈಗಿನದು ಎಂದು ತೋರಿಸಲಾಗುತ್ತಿದೆ. ಈ ಬಗ್ಗೆಯೂ ಕೂಲಂಕಷ ಪರಿಶೀಲನೆ ನಡೆಸಿ. ಹಾಗೆಯೇ ನರೇಗಾ ಯೋಜನೆಯಡಿ ಪರಿಸರ ಬಲವರ್ಧನೆ ಸಂಬಂಧ ಏನೆಲ್ಲಾ ಪ್ರಗತಿ ಸಾಧಿಸಿದ್ದೀರಿ ಎಂಬುದರ ಬಗ್ಗೆ ನನಗೆ ಖುದ್ದು ಮಾಹಿತಿ ಕೊಡಿ ಎಂದು ಕಟ್ಟಪ್ಪಣೆ ಮಾಡಿದರು.
ಈ ವೇಳೆ ತಹಸೀಲ್ದಾರ್ ಗೀತಾ, ಇಒ ಗಿರೀಶ್ ಇತರರು ಇದ್ದರು.