March 3, 2026
Spread the love




ವರದಿ:✍🏻 ಶಶಿಧರ್ ಹೊಸಮನಿ, ಕೊಪ್ಪಳ ಜಿಲ್ಲೆ ಯಲಬುರ್ಗಾ

ಕೊಪ್ಪಳ ಜಿಲ್ಲೆಯ ಬಸಾಪುರ ಗ್ರಾಮದ ಸಮೀಪದ ಬುಲೆಟ್ (ಬೈಕ್ ಉತ್ಪಾದನಾ) ಕಾರ್ಖಾನೆಯ ಸೆಕ್ಯೂರಿಟಿ ಸಿಬ್ಬಂದಿಯಿಂದ ಸರಳ ಕುರಿಗಾರನ ಮೇಲೆ ದೌರ್ಜನ್ಯ ನಡೆದಿದೆ. ಕುರಿ ಮತ್ತು ದನಕರುಗಳಿಗೆ ನೀರು ಕುಡಿಸಲೆಂದು ಕಾರ್ಖಾನೆಯ ಸಮೀಪದ ಕೆರೆಗೆ ಹೋದ ಸಂದರ್ಭದಲ್ಲಿ, ಬಸಾಪುರ ಗ್ರಾಮದ ಯುವ ಕುರಿಗಾರನ ಮೇಲೆ ಕಾರ್ಖಾನೆಯ ಸೆಕ್ಯೂರಿಟಿ ಗಾರ್ಡ್ ಹಾಗೂ ಇತರ ಸಿಬ್ಬಂದಿ ಸೇರಿ ಕಬ್ಬಿಣದ ರಾಡ್, ದೊಣ್ಣೆಗಳಿಂದ ಹಲ್ಲೆ ನಡೆಸಿದ ಘಟನೆ ನೆನ್ನೆ ಮಧ್ಯಾಹ್ನ ನಡೆದಿದೆ.



ಹಲ್ಲೆಯ ತೀವ್ರತೆಯಿಂದ ಕುರಿಗಾರನ ತಲೆ, ಕೈ ಹಾಗೂ ಕಾಲುಗಳಿಗೆ ಗಾಯವಾಗಿದೆ. ತಕ್ಷಣವೇ ಸ್ಥಳೀಯರು ಸಂಬಂಧಪಟ್ಟವರ ಸಹಾಯದಿಂದ ಗಾಯಗೊಂಡ ಕುರಿಗಾರನನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತು. ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಹೆಚ್ಚಿನ ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ.



ಈ ಹೀನ ಕೃತ್ಯದ ಕುರಿತು ಸ್ಥಳೀಯ ಗ್ರಾಮಸ್ಥರು, ಮುಖಂಡರು, ಸಾಮಾಜಿಕ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಸರಳವಾಗಿ ತಮ್ಮ ಜಾನುವಾರುಗಳಿಗೆ ನೀರು ಕುಡಿಸುತ್ತಿದ್ದ ವ್ಯಕ್ತಿಯ ಮೇಲೆ ಈ ರೀತಿ ಮರಣಾಂತಿಕಾ ಹಲ್ಲೆ ನಡೆಸುವುದು ಮಾನವೀಯತೆ ವಿರುದ್ಧದ ಕಾರ್ಯ. ಕಾರ್ಖಾನೆ ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂಬ ಆಗ್ರಹ ವ್ಯಕ್ತವಾಗಿದೆ.



ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸ್ಥಳಕ್ಕೆ ಆಗಮಿಸಿರುವ ಪೋಲಿಸ್ ಅಧಿಕಾರಿಗಳು ಪ್ರತ್ಯಕ್ಷ ಸಾಕ್ಷ್ಯಗಳು ಹಾಗೂ ದೃಶ್ಯಾವಳಿ ಆಧಾರಿತ ತನಿಖೆ ನಡೆಸುತ್ತಿದ್ದಾರೆ.



ಈ ಘಟನೆಗೆ ಸಂಬಂಧಿಸಿದಂತೆ ಜಿಲ್ಲೆಯ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಸಂಸದರು ಕೂಡ ತಕ್ಷಣವೇ ಸ್ಪಂದಿಸಬೇಕು ಎಂಬ ಆಗ್ರಹ ಜನರಿಂದ ವ್ಯಕ್ತವಾಗಿದೆ. “ಕಾರ್ಖಾನೆಯ ಹೆಸರು ಬೆಳೆಯುತ್ತಾ ಹೋಗಬೇಕು ಆದರೆ ಗ್ರಾಮಸ್ಥರ ಮೇಲಿನ ಅನ್ಯಾಯದಿಂದ ಅಲ್ಲದಿರಬೇಕು” ಎಂಬುದಾಗಿ ಸ್ಥಳೀಯ ಮುಖಂಡರು ತಿಳಿಸಿದ್ದಾರೆ.



ಘಟನೆಯ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಜಿಲ್ಲೆಯಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಸಾರ್ವಜನಿಕರಿಂದ ಕಾರ್ಖಾನೆಯ ಮೇಲೆ ದಪ್ಪನೋಟ ಬಿದ್ದಿದ್ದು, ಭದ್ರತಾ ಸಿಬ್ಬಂದಿಗಳ ವರ್ತನೆ ಪ್ರಶ್ನೆಯೊಳಗಾಗಿದೆ.



ಹಾಲಿ ಸ್ಥಿತಿಯಲ್ಲಿ ಗಾಯಾಳು ಕುರಿಗಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಈ ಕುರಿತಂತೆ ಸಂಬಂಧಪಟ್ಟ ಅಧಿಕಾರಿಗಳಿಂದ ಸೂಕ್ತ ಕಾನೂನು ಕ್ರಮದ (ನ್ಯಾಯದ) ನಿರೀಕ್ಷೆಯಲ್ಲಿದ್ದಾರೆ ಗ್ರಾಮಸ್ಥರು.✍🏻

Leave a Reply

Your email address will not be published. Required fields are marked *