March 3, 2026
Spread the love



ಶಿವಮೊಗ್ಗ ಜಿಲ್ಲೆಯ ಹಾರನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಯುತ್ತಿರುವ ವೈದ್ಯಕೀಯ ದುರ್ಬಲತೆ ನಮ್ಮ ರಾಜ್ಯದ ಆರೋಗ್ಯ ವ್ಯವಸ್ಥೆಯ ಅಧೋಗತಿಗೆ ಸ್ಪಷ್ಟ ಸಾಕ್ಷಿಯಾಗಿದೆ. ಹಾರನಹಳ್ಳಿಯ ಆಸ್ಪತ್ರೆಗೆ ಅನಾರೋಗ್ಯದಿಂದ ಬಳಲುತ್ತಿರುವ ಬಡ ರೋಗಿಗಳು ಚಿಕಿತ್ಸೆಗಾಗಿ ಧಾವಿಸುತ್ತಿದ್ದರೂ, ಅವರಿಗೆ ಬೇಕಾದ ಮೂಲಭೂತ ಸೌಕರ್ಯಗಳು ಇಲ್ಲದೇ ಹಿನ್ನಡೆ ಉಂಟಾಗುತ್ತಿದೆ. ಇದು ಕೇವಲ ದುರಂತವಲ್ಲ, ಅದು ಮಾನವೀಯತೆಯ ವಿರುದ್ಧದ ಕ್ರೂರ ಕೃತ್ಯವೂ ಹೌದು.

ವೈದ್ಯಧಿಕಾರಿ ರೋಗಿಗೆ ‘ಇಂಜೆಕ್ಷನ್ ಹಾಕಲು ಸಿರಿಂಜ್ ಇಲ್ಲ’ ಎಂಬುದನ್ನು ಕಾರಣ ನೀಡಿ, “ನೀವೇ ಮೆಡಿಕಲ್‌ ಶಾಪ್‌ಗೆ ಹೋಗಿ ಸಿರಿಂಜ್ ತಂದುಕೊಡಿ, ನಾನು ಹಣ ಕೊಡುತ್ತೇನೆ” ಎನ್ನುವುದು ಅವುಮಾನದ ನಾಚಿಕೆಯ ಸಂಗತಿಯಾಗಿದೆ. ವೈದ್ಯರು ಸರಕಾರಿ ಆಸ್ಪತ್ರೆಯಲ್ಲಿದ್ದುಕೊಂಡು ರೋಗಿಗಳಿಂದನೇ ವೈದ್ಯಕೀಯ ಉಪಕರಣ ತರಿಸಿಕೊಂಡು ಚಿಕಿತ್ಸೆಗೆ ನೀಡುತ್ತಿರುವುದು ವೈದ್ಯರ ಕರ್ತವ್ಯದ ಲೋಪವಷ್ಟೇ ಅಲ್ಲ, ಸರ್ಕಾರಿ ಆಸ್ಪತ್ರೆಗಳನ್ನೆ ಆಧಾರಿತರಾಗಿರುವ ಸಾರ್ವಜನಿಕ ನಂಬಿಕೆಗೆ ಅನ್ಯಾಯವೇಸಗುತ್ತಿದ್ದಾರೆ ಎನ್ನುವುದರಲ್ಲಿ ತಪ್ಪೇನಿಲ್ಲ.

ಇದೊಂದು ಹದಗೆಟ್ಟ ವೈದ್ಯಕೀಯ ವ್ಯವಸ್ಥೆಯ ಪ್ರತಿಬಿಂಬ. ಕಳೆದ ಐದು ದಿನಗಳಿಂದ ಈ ಪರಿಸ್ಥಿತಿ ಇದೆ ಎಂಬುದು, ಮೇಲ್ದರ್ಜೆಯ ವೈದ್ಯಾಧಿಕಾರಿಗಳ ನಿರ್ಲಕ್ಷ್ಯವನ್ನು ತೋರಿಸುತ್ತದೆ. ರೋಗಿಗಳ ದೂರು ದೊರಕಿದ ಮೇಲೆ ಮಾತ್ರ “ನಮ್ಮ ಗಮನಕ್ಕೆ ಬಂದಿಲ್ಲ, ಮುಂದೆ ಈ ರೀತಿ ನಡೆಯದಂತೆ ನೋಡಿಕೊಳ್ಳುತ್ತೇವೆ” ಎಂಬ ಸ್ಪಷ್ಟನೆ, ಕೊಡುತ್ತಿರುವ DHO. ಗಡ್ಡಕ್ಕೆ ಬೆಂಕಿ ಬಿದ್ದ ಮೇಲೆ ಬಾವಿ ತೋಡುವ ಗಾದೆಯಂತಾಗಿದೆ ನಮ್ಮ ವೈದ್ಯಧಿಕಾರಿಗಳ ಉತ್ತರ.



ಈ ಘಟನೆ ವೈದ್ಯಧಿಕಾರಿಯ ನೈತಿಕತೆಗೆ ಧಕ್ಕೆಯನ್ನು ಉಂಟುಮಾಡುತ್ತಿರುವುದು ಮಾತ್ರವಲ್ಲ, ಇಲಾಖೆಯ ನಿರ್ಲಕ್ಷ್ಯ ಮತ್ತು ನಿರ್ವಹಣೆಯ ದೌರ್ಬಲ್ಯವನ್ನೂ ಬಹಿರಂಗ ಪಡಿಸುತ್ತದೆ. ಸರ್ಕಾರದ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು, ಪ್ರಾಮಾಣಿಕತೆಯಿಂದ ಸೇವೆ ನೀಡದಿದ್ದರೆ, ಗ್ರಾಮೀಣ ಬಡಜನರ ಬದುಕು ತುತ್ತತುದಿಗೇ ತಲುಪುತ್ತದೆ. ಈ ಪರಿಸ್ಥಿತಿ ಹಾರನಹಳ್ಳಿ PHC ಮಾತ್ರವಲ್ಲ ರಾಜ್ಯದ ಹಲವಾರು PHC ಗಳಲ್ಲಿ ಇದೆ ಪರಿಸ್ಥಿತಿ ಹೆದರಿಸುತ್ತಿರುವುದು ತಿಳಿದು ಬಂದಿದೆ.



ಆರೋಗ್ಯ ಸಚಿವರು ಮತ್ತು ಜಿಲ್ಲಾ ವೈದ್ಯಾಧಿಕಾರಿಗಳು ಈ ಬಗ್ಗೆ ತಕ್ಷಣ ಕ್ರಮ ಕೈಗೊಂಡು, ಹಾರನಹಳ್ಳಿಯ ವೈದ್ಯಧಿಕಾರಿಯ ವಿರುದ್ಧ ಕಠಿಣ ಶಿಸ್ತು ಕ್ರಮ ಜರುಗಿಸಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಗತ್ಯವಿರುವ ಔಷಧ, ಉಪಕರಣಗಳ ಪೂರೈಕೆ ಖಚಿತಪಡಿಸಬೇಕು. ಚಿಕಿತ್ಸೆಗಾಗಿ ಬರುವ ಪ್ರತಿಯೊಬ್ಬ ನಾಗರಿಕನಿಗೂ ಮಾನವೀಯತೆ ಮತ್ತು ಗೌರವದೊಂದಿಗೆ ಉತ್ತಮ ವೈದ್ಯಕೀಯ ಸೇವೆ ದೊರಕುವಂತೆ ಮಾಡಬೇಕಾಗಿದೆ

ಹೀಗೆ ಬಡರೋಗಿಗಳ ಜೀವದ ಜೊತೆ ಆಟ ವಾಡುವಂತಹ  ಅಧಿಕಾರಿಗಳ ನಿರ್ಲಕ್ಷ್ಯತೆ ಮುಂದುವರಿದರೆ, ಅದು ಕೇವಲ ತಾಂತ್ರಿಕ ತಪ್ಪಲ್ಲ, ಅದು ಅಪರಾಧ. ಇಂತಹ ವೈಫಲ್ಯಗಳ ವಿರುದ್ಧ ಶೀಘ್ರ ಕ್ರಮ ಕೈಗೊಂಡಾಗ ಮಾತ್ರ ಜನತೆ ಆರೋಗ್ಯ ಇಲಾಖೆ ಮೇಲೆ ಮತ್ತೆ ನಂಬಿಕೆಯಿಂದ ಬರುವ ಸ್ಥಿತಿ ನಿರ್ಮಾಣವಾಗಬಹುದು. ಇನ್ನಾದರೂ ಇಂತಹ ಪರಿಸ್ಥಿತಿಯನ್ನು ಬದಲಾವಣೆ ಮಾಡುವಲ್ಲಿ ಸಂಬಂದ ಪಟ್ಟ ಧಿಕಾರಿಗಳು ಮೊನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕಿದೆ

Leave a Reply

Your email address will not be published. Required fields are marked *